Kannada Vakyagalu : ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ, ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದ ಸಮೂಹವೇ ವಾಕ್ಯ ವೆನಿಸುವುದು. ಅನೇಕ ಶಬ್ದಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯ ರಚನೆ ಎನಿಸುವುದು.
ಅನ್ವಯಾನುಕ್ರಮ : ವಾಕ್ಯದಲ್ಲಿ ಮೊದಲಿಗೆ ಕರ್ತೃಪದ ನಂತರದಲ್ಲಿ ಕರ್ಮಪದ ಬಂದು ಕೊನೆಯಲ್ಲಿ ಕ್ರಿಯಾಪದ ಬರುತ್ತದೆ. ವಿಶೇಷಣಗಳು ಆಯಾಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ. ಉದಾ: ಮಹಾಶೂರನಾದ ಶ್ರೀರಾಮಚಂದ್ರನು ದುಷ್ಟನಾದ ರಾವಣನನ್ನು ತೀಕ್ಷ್ಮವಾದ ಬಾಣದಿಂದ ಕೊಂದನು.
(ಇಲ್ಲಿ ಶ್ರೀ ರಾಮಚಂದ್ರನು ಕರ್ತೃ, ರಾವಣನನ್ನು – ಕರ್ಮ, ಕೊಂದನು – ಕ್ರಿಯಾಪದ).
ವಾಕ್ಯಗಳ ಪ್ರಕಾರಗಳು
Kannada Vakyagalu ಸಾಮಾನ್ಯ ವಾಕ್ಯ: ಒಂದು ಕ್ರಿಯಾಪದದೊಡನೆ ಸ್ವತಂತ್ರವಾಗಿರುವ ವಾಕ್ಯಗಳೇ ಸಾಮಾನ್ಯ ವಾಕ್ಯಗಳೆನಿಸುವವು.
ಉದಾಹರಣೆ
1) ಘಾನ ದೇಶವು ಮಲೇರಿಯಾದ ತವರೂರಾಗಿತ್ತು.
2) ಘಾನ ದೇಶದಲ್ಲಿ ವಿಶ್ವೇಶ್ವರಯ್ಯನವರು ಮಲೇರಿಯಾ ಬೇನೆಯಿಂದ ಬಳಲಿದರು.
ಸಂಯೋಜಿತ ವಾಕ್ಯ :
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯವೆನಿಸುವುದು.
ಉದಾಹರಣೆ : ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯು ವಾಲ್ಮೀಕಿಯ ಪುಣ್ಯಾಶ್ರಮದ ಉಪವನವನ್ನು ಹೊಕ್ಕಿತು. ಆಗ ಆ ತೋಟದ ಕಾವಲುಮಾಡುತ್ತಿದ್ದ ಲವನು ಅದನ್ನು ಕಟ್ಟಿಹಾಕಿದನು; ಆದ್ದರಿಂದ ಲವನನ್ನು ಕುದುರೆಯ ಕಾವಲಿನ ಭಟರು ಹಿಡಿದುಕೊಂಡು ಹೋದರು
ಮಿಶ್ರವಾಕ್ಯ :
ಒಂದು/ಅನೇಕ ವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದರೆ ಅಂಥಹ ವಾಕ್ಯಗಳನ್ನು ಮಿಶ್ರವಾಕ್ಯ ಎನ್ನುವರು.
ಉದಾಹರಣೆ : ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು, ಆದರೆ ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಅವರು ಬಹಳ ಮರುಗಿದರು
ವಾಕ್ಯಗಳಲ್ಲಿ ದೋಷಗಳು
ಅಶುದ್ಧ ವಾಕ್ಯ : ಸಂಪುಟದಲ್ಲಿ ಎಲ್ಲಾ ಜಿಲ್ಲೆಗೆ ಪ್ರಾತಿನಿಧ್ಯ
ಶುದ್ಧ ವಾಕ್ಯ : ಸಂಪುಟದಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ
ಅಶುದ್ಧ ವಾಕ್ಯ : ಸತ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳು ತೀವ್ರತರಹದ ಶಂಕೆಗೆ ಎಡೆಮಾಡಿದೆ.
ಶುದ್ಧವಾಕ್ಯ : ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳು ತೀವ್ರತರದ ಶಂಕೆಗೆ ಎಡೆಮಾಡಿವೆ.
ಅಶುದ್ಧ ವಾಕ್ಯ : ಸ್ವತಃ ನಾನೇ ಕಣ್ಣಿಂದ ನೋಡಿದೆನು.
ಶುದ್ಧ ವಾಕ್ಯ : ಸ್ವತಃ ನಾನೇ ಕಣ್ಣುಗಳಿಂದ ನೋಡಿದೆನು.
ಅಶುದ್ಧ ವಾಕ್ಯ : ಮಗುವಿಗೆ ನವಮಾಸ ತುಂಬಿತು.
ಶುದ್ಧ ವಾಕ್ಯ : ಮಗುವಿಗೆ ನವಮಾಸಗಳು ತುಂಬಿದವು.
ಅಶುದ್ಧವಾಕ್ಯ : ಕನ್ನಡ ಸಾಹಿತ್ಯಕ್ಕೆ ವಿವಿಧ ಮುಖದಿಂದ ಸೇವೆ ಸಲ್ಲಿಸುತ್ತಾರೆ.
ಶುದ್ಧವಾಕ್ಯ : ಕನ್ನಡ ಸಾಹಿತ್ಯಕ್ಕೆ ವಿವಿಧ ಮುಖಗಳಿಂದ ಸೇವೆ ಸಲ್ಲಿಸುತ್ತಾರೆ